ಬೆಂಗಳೂರು: ಸಚಿವ ಬಸವರಾಜ ರಾಯರೆಡ್ಡಿ ಅವರ ಧಾರ್ಮಿಕ ಹೇಳಿಕೆಯನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಮಧ್ಯಪ್ರವೇಶಿಸಿ ಸಚಿವರಿಂದ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಬೇಕು. ಇಲ್ಲವಾದಲ್ಲಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, “ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’!” ಎಂದು ವ್ಯಂಗ್ಯವಾಡಿದ್ದಾರೆ.
ಸಚಿವ ಬಸವರಾಜ ರಾಯರೆಡ್ಡಿ ಅವರು “ಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲ” ಎಂದು ಹೇಳಿರುವುದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

“ಧರ್ಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ವೈಯಕ್ತಿಕ ನಂಬಿಕೆ ಇರಬಹುದು. ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಕೋಟ್ಯಂತರ ಜನರ ಆರಾಧನೆ, ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ,” ಎಂದು ಅವರು ಹೇಳಿದ್ದಾರೆ.
ರಾಯರೆಡ್ಡಿ ಅವರ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೌನವೇ ಜನರಲ್ಲಿ ಹೆಚ್ಚಿನ ಆಕ್ರೋಶ ಮೂಡಿಸಿದೆ ಎಂದು ಅಶೋಕ್ ಟೀಕಿಸಿದ್ದಾರೆ. “ಹಿಂದೂಗಳ ಭಾವನೆಗೆ ಧಕ್ಕೆಯಾದರೂ ಪರವಾಗಿಲ್ಲ, ಸಚಿವರನ್ನು ರಕ್ಷಿಸುವುದೇ ಸರ್ಕಾರದ ಉದ್ದೇಶವೇ?” ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಬೇಕು. ರಾಯರೆಡ್ಡಿ ಅವರಿಂದ ಹಿಂದೂ ಸಮುದಾಯದ ಕ್ಷಮೆಯಾಚನೆ ಮಾಡಿಸಬೇಕು. ಅವರು ಕ್ಷಮೆ ಕೇಳಲು ಸಿದ್ಧರಿಲ್ಲದಿದ್ದರೆ ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ – ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’!
ಸಿಎಂ @DKShivakumar ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವರಹೇಳನ ಮಾಡಿದಾಗ ಮೌನ ವಹಿಸುವುದೇಕೆ?
ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು… pic.twitter.com/lwWNZEt83p
— R. Ashoka (@RAshokaBJP) August 31, 2026
ಇದನ್ನು ಮಾಡದಿದ್ದರೆ ಸರ್ಕಾರದ ನಿಲುವಿನ ಬಗ್ಗೆ ಹಲವು ಪ್ರಶ್ನೆಗಳು ಮೂಡಲಿವೆ ಎಂದು ಅಶೋಕ್ ಹೇಳಿದ್ದಾರೆ. “ಹಿಂದೂಗಳ ಧಾರ್ಮಿಕ ಭಾವನೆ ದೊಡ್ಡದೋ ಅಥವಾ ಸಚಿವರ ಕುರ್ಚಿ ಮತ್ತು ಮತಬ್ಯಾಂಕ್ ದೊಡ್ಡದೋ?” ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದ್ದಾರೆ.
ರಾಯರೆಡ್ಡಿ ಅವರ ಹೇಳಿಕೆ ವೈಯಕ್ತಿಕ ಅಭಿಪ್ರಾಯವೇ ಅಥವಾ ಸರ್ಕಾರದ ನಿಲುವಿಗೆ ಸಂಬಂಧಿಸಿದುದೇ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ರಾಜ್ಯದ ಜನತೆ ಸರ್ಕಾರದ ನಡೆ ಗಮನಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
